ಮಂಗಳೂರು: ಗ್ರಾಮೀಣ ಭಾಗದ ಕಾಲೇಜಿನ ಬದಲು ಮಂಗಳೂರು ನಗರದ ಕಾಲೇಜಿಗೆ ಹೋಗಲು ಬಯಸಿದ ವಿದ್ಯಾರ್ಥಿನಿಯೋರ್ವೆ ಬೆಳ್ಳಂಬೆಳಗ್ಗೆ ತಾನೇ ಬ್ಲೇಡ್ನಿಂದ ಕೈಯನ್ನು ಕೊಯ್ದುಕೊಂಡು ನಡುದಾರಿಯಲ್ಲಿ ಅಪಹರಣದ ಕಥೆ ಕಟ್ಟಿದ್ದು ಇದೀಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಬೆಳ್ತಂಗಡಿಯಲ್ಲಿ ಸೋಮವಾರ ಬೆಳಗ್ಗೆ ನಡೆದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣದಲ್ಲಿ ವಿದ್ಯಾರ್ಥಿನಿಯೇ ತನ್ನ ಕೈಗೆ ಬ್ಲೇಡ್ನಲ್ಲಿ ಗೀರಿ ಅಪಹರಣದ ಕಥೆ ಕಟ್ಟಿದ್ದಾಳೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಕಾರಿನ ನಂಬರ್ ಪ್ಲೇಟ್ಗೆ ಬಟ್ಟೆ ಕಟ್ಟಿದ್ದು, ಮುಖಕ್ಕೆ ಮುಸುಕು ಹಾಕಿದ್ದರು, ಮೂವರಿದ್ದರು, ಬೈಕೊಂದು ಹಿಂದಿನಿಂದ ಬಂದಿದ್ದಕ್ಕೆ ನನ್ನನ್ನು ಬಿಟ್ಟು ಎಸ್ಕೇಪ್ ಆಗಿದ್ದರು ಎನ್ನುವ ಕಥೆಯನ್ನು ಯುವತಿ ಪೊಲೀಸರಲ್ಲಿ ಹೇಳಿದ್ದಳು. ಇದರಂತೆ ಪೊಲೀಸರು ಘಟನೆ ನಡೆದ ಪರಿಸರದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದು, ಯಾವುದೇ ಸಾಂದರ್ಭಿಕ ಸಾಕ್ಷಿ ದೊರಕಲಿಲ್ಲ. ಹಾಗಾಗಿ ವಿದ್ಯಾರ್ಥಿನಿಯಿಂದ ಹೆಚ್ಚಿನ ಮಾಹಿತಿ ಪಡೆಯಲು ಮುಂದಾಗಿದ್ದು ಕಾರಿನ ಬಣ್ಣ, ಕಾರು ಯಾವುದು? ಎಲ್ಲವನ್ನೂ ಕರೆಕ್ಟ್ ಆಗಿ ಹೇಳಲು ಹೇಳಿದಾಗ ಆಕೆ ತಬ್ಬಿಬ್ಬಾಗಿದ್ದಾಳೆ. ನಂತರ ಅಪಹರಣ ಘಟನೆಯೇ ಸುಳ್ಳು ಎಂದು ಯುವತಿ ಹೇಳಿದ್ದು, ಬೇರೆ ಕಾಲೇಜು ಸೇರುವುದಕ್ಕೆ ಅಪಹರಣದ ಕತೆ ಕಟ್ಟಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ಈ ನಡುವೆ ಮನೆಯ ಸಮೀಪವೇ ಪುಸ್ತಕಗಳನ್ನು ಸುಟ್ಟು ಹಾಕಿದ್ದು, ತನ್ನ ಬ್ಯಾಗನ್ನು ಅಪಹರಣಕಾರರು ಒಯ್ದಿದ್ದಾರೆ ಎಂದು ಕಥೆ ಕಟ್ಟಿದ್ದಳು. ಕೈ ಮೇಲಿನ ಗಾಯದಿಂದ ಅನುಮಾನಗೊಂಡ ಪೊಲೀಸರು ಕೂಲಂಕಷ ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದ್ದು ಇದರೊಂದಿಗೆ ಈ ಅಪಹರಣ ಪ್ರಕರಣ ಸುಖ್ಯಾಂತ್ಯಗೊಂಡಿದೆ ಎನ್ನಲಾಗಿದೆ.

0 Comments