Ticker

6/recent/ticker-posts

Ad Code

ಖ್ಯಾತ ಕಲಾವಿದ ರಂಗ ನಿರ್ದೇಶಕ 'ಕಿರಣ್ ಕಲಾಂಜಲಿ ಕೂಡ್ಲು'ರಿಂದ ಕಾಸರಗೋಡು ಗೋ- ಕುಟೀರದ ನೀಲನಕ್ಷೆ ರಚನೆ

 

ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ  35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ "ಕಾಸರಗೋಡು ಗೋ-ಕುಟೀರ" ಕಟ್ಟಡದ ಸಮಗ್ರವಾದ ನೀಲನಕ್ಷೆ (ಬ್ಲೂಪ್ರಿಂಟ್) ಯನ್ನು ಖ್ಯಾತ ಕಲಾವಿದ, ರಂಗ ನಿರ್ದೇಶಕ,  ಕಿರಣ್ ಕಲಾಂಜಲಿ ಕೂಡ್ಲು, ಕಾಸರಗೋಡು ಅವರು ರಚಿಸಿದ್ದಾರೆ. ಪ್ರಸ್ತುತ ಮಂಗಳೂರಿನಲ್ಲಿ ತನ್ನ ಕಲಾ ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೇರಳ- ಕರ್ನಾಟಕ ರಾಜ್ಯದಲ್ಲಿ ಕಲಾ, ರಂಗಭೂಮಿ ಕ್ಷೇತ್ರಗಳಲ್ಲಿ ಕಿರಣ್ ಕಲಾಂಜಲಿ ಕೂಡ್ಲು ತಮ್ಮ ಕಲಾ ಪ್ರಕಾರಗಳ ಮೂಲಕ ಗುರುತಿಸಿಕೊಂಡಿದ್ದಾರೆ.  ನಾಟಕ ನಿರ್ದೇಶಕ, ರಂಗ ಕಲಾವಿದರಾಗಿ ಅಂತರ ರಾಜ್ಯಾದ್ಯಂತ ಪ್ರಸಿದ್ಧ ವೇದಿಕೆಗಳಲ್ಲಿಇವರ "ಏಕವ್ಯಕ್ತಿ ನಾಟಕ" ಪ್ರದರ್ಶನಗೊಂಡಿದ್ದು, ವಿವಿಧ ಸನ್ಮಾನ ಪುರಸ್ಕಾರಗಳಿಂದ  ಗೌರವಿಸಲ್ಪಟ್ಟಿದ್ದಾರೆ. ಕಿರಣ್ ಕಲಾಂಜಲಿ ಕೂಡ್ಲು ಅವರನ್ನು ಕಾಸರಗೋಡು ಗೋ-ಕುಟೀರದ  ಉದ್ಘಾಟನಾ ಸಮಾರಂಭ ಮತ್ತು ಪ್ರವೇಶೋತ್ಸವದಂದು ಗೌರವಿಸಲಾಗುವುದು.

ದೇಸಿ ಗೋವುಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ-ಕುಟೀರವನ್ನು  ಜಗಜ್ಜನನಿ ಗೋಮಾತೆಯ ಆಶೀರ್ವಾದವನ್ನು ಪಡೆಯುವ ಉದ್ದೇಶದಿಂದ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ರೂಪುಗೊಳಿಸುವುದಕ್ಕಾಗಿ  ದ್ವೈವಾರ್ಷಿಕ ಕಾರ್ಯ ಯೋಜನೆಯನ್ನು ಕೈಗೊಳ್ಳಲಾಗಿದೆ.

 ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ಕಾಸರಗೋಡು ಕನ್ನಡ ಗ್ರಾಮಕ್ಕೆ ಆಗಮಿಸಿ ಕಾಸರಗೋಡು ಗೋ-ಕುಟೀರದಲ್ಲಿ ಗೋವುಗಳಿಗೆ ಗೋ-ಗ್ರಾಸ ನೀಡಿ, ಗೋ- ಆರತಿಯನ್ನು ಬೆಳಗಿಸಿ, ಗೋ-ಸಂಕೀರ್ತನೆಯನ್ನು ಹಾಡಿ ಗೋ-ಕುಟೀರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ಶ್ರದ್ಧಾ ಭಕ್ತಿಯಿಂದ ಪಡೆಯಲು ಅವಕಾಶ ಕಲ್ಪಿಸಲಾಗುವುದು. ತಮ್ಮ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳ ನಿಮಿತ್ತ ಕಾಸರಗೋಡು ಗೋ -ಕುಟೀರಕ್ಕೆ ಆಗಮಿಸಿ ಗೋ ಮಾತೆಯ ಸೇವೆ ಸಲ್ಲಿಸಿ ಕುಟುಂಬದವರು ಸಂಭ್ರಮವನ್ನು ಹಂಚಿಕೊಳ್ಳಲು ಉದ್ದೇಶಿಸಲಾಗಿದೆ.

 ಕಾಸರಗೋಡು ಗೋ-ಕುಟೀರದ ಆವರಣದಲ್ಲಿ ನಿರ್ಮಾಣವಾಗಲಿರುವ  "ಕಾಸರಗೋಡು ಕೃಷಿ ಕುಟೀರ"ದಲ್ಲಿ ವಿವಿಧ ಸಂಘ ಸಂಸ್ಥೆಗಳು, ಬ್ಯಾಂಕ್ ಉದ್ಯಮ, ಕೈಗಾರಿಕಾ ಸಂಸ್ಥೆಗಳು, ದೇವಸ್ಥಾನ, ಮಠ, ಮಂದಿರ, ವಿವಿಧ ಟ್ರಸ್ಟ್ ಗಳ ನೆರವಿನ ಪ್ರಾಯೋಜಕತ್ವದಡಿಯಲ್ಲಿ ಸಾವಯವ ಕೃಷಿ, ಗ್ರಾಮೀಣ ಸ್ವ- ಉದ್ಯೋಗ ಕೇಂದ್ರ, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಮಹಿಳಾ ಉದ್ಯೋಗಿಗಳಿಗಾಗಿ ಹೊಲಿಗೆ, ವಸ್ತ್ರ-ವಿನ್ಯಾಸ, ಡಿಸೈನಿಂಗ್ ಕೇಂದ್ರ, ಕಂಪ್ಯೂಟರ್, ಡಿಜಿಟಲ್ ಮಾಧ್ಯಮ ಕೇಂದ್ರ, ಕಲಾ ಗ್ಯಾಲರಿ, ಜಾನಪದ ವಸ್ತು ಸಂಗ್ರಹಾಲಯ,  ಗ್ರಂಥಾಲಯ, ಹಿರಿಯ ನಾಗರಿಕರಿಗಾಗಿ ಗ್ರಾಮೀಣ ವೈದ್ಯಕೀಯ ಕ್ಲಿನಿಕ್, ಸಾಹಿತ್ಯ ಕುಟೀರ, ಸಂಕೀರ್ತನಾ  ಕುಟೀರ, ನಮ್ಮ ಮನೆ - ವಿಶ್ರಾಂತಿ ಗ್ರಹ (ರೆಸ್ಟ್ ಹೌಸ್) ವನ್ನು ನಿರ್ಮಿಸಲು ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

Post a Comment

0 Comments