ಪೆರ್ಲ : ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿಗೆ ಚಿಕಿತ್ಸಾ ಸೌಲಭ್ಯ ಬಯಸಿ ಬರುವ ಬಡ ರೋಗಿಗಳನ್ನು ಪ್ರಾಥಮಿಕ ತಪಾಸಣೆಯನ್ನಷ್ಟೇ ನಡೆಸಿ ಕಾಸರಗೋಡಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸಿನೊಂದಿಗೆ ಕಳಿಸುವ ಪ್ರವೃತ್ತಿ ನಡೆಯುತ್ತಿರುವುದಾಗಿ ಆರೋಪ ಎದ್ದಿದ್ದು ಈ ಬಗ್ಗೆ ಸಾರ್ವಜನಿಕ ವಲಯದಿಂದ ಬಂದ ದೂರಿನಂತೆ ಎಣ್ಮಕಜೆ ಗ್ರಾ. ಪಂ. ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್ ವಳಮೊಗರು ಇಂದು ಮೆಡಿಕಲ್ ಕಾಲೇಜು ಸಂದರ್ಶಿಸಿ ಸಮರ್ಪಕ ಚಿಕಿತ್ಸೆಯನ್ನು ನೀಡುವಂತೆ ಮೆಡಿಕಲ್ ಕಾಲೇಜು ಜೂನಿಯರ್ ಸೂಪರಿಟೆಂಡೆಂಟ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಇತ್ತೀಚಿಗೆ ಮೆಡಿಕಲ್ ಕಾಲೇಜ್ ಆಸ್ಪತ್ರೆಯನ್ನು ಆಶ್ರಯಿಸಿದ ಎಣ್ಮಕಜೆ ಪಂಚಾಯತಿನ ಕಡು ಬಡವರಾದ, ಹಿಂದುಳಿದ ಸಮಾಜದ ರೋಗಿಯೊಬ್ಬರನ್ನು ಇದೇ ರೀತಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಶಿಫಾರಸಿನೊಂದಿಗೆ ರವಾನಿಸಿದಾಗ ರೋಗಿ ಮೃತಪಟ್ಟ ಘಟನೆ ನಡೆದಿದೆ. ಬಳಿಕ ಮೃತದೇಹ ಬಿಟ್ಟು ಸಿಗಲು ಆ ಕುಟುಂಬ ದಾನಿಗಳ ಮೊರೆ ಹೋಗಿ ಹಣ ಸಂಗ್ರಹಿಸಿ ಮೃತದೇಹ ಪಡೆದರೆಂದೂ ಹೇಳಲಾಗಿದೆ. ಅದೇ ರೀತಿ ತುರ್ತು ಚಿಕಿತ್ಸೆಗೆಂದು ಬಂದ ರೋಗಿಗಳನ್ನು ಗಂಟೆಗಳಷ್ಟು ಕಾಯಿಸಿ ಪರದಾಡಿಸಿದ ಪ್ರಸಂಗಳು ನಡೆದಿತ್ತು.
ಸಾರ್ವಜನಿಕ ವಲಯದಿಂದ ಬಂದಿರುವ ಇಂಥ ದೂರುಗಳ ಹಿನ್ನೆಲೆಯಲ್ಲಿ ವೈದ್ಯರ ಕಡೆಯಿಂದ ಉಂಟಾಗುತ್ತಿರುವ ರೋಗಿಗಳ ಬಗೆಗಿನ ನಿರ್ಲಕ್ಷ್ಯ ಮತ್ತು ಅಸಡ್ಡೆ ಆವರ್ತಿಸಿದರೆ ರಾಜ್ಯ ಆರೋಗ್ಯ ಸಚಿವರಿಗೂ ಸಂಬಂಧಪಟ್ಟ ಆರೋಗ್ಯ ಇಲಾಖಾ ಮುಖ್ಯಸ್ಥರಿಗೂ ದೂರು ನೀಡುವುದಲ್ಲದೆ ಬಹಿರಂಗ ಹೋರಾಟಕ್ಕಿಳಿಯುವುದಾಗಿ ಅವರು ಮುನ್ನೆಚ್ಚರಿಕೆ ನೀಡಿದರು.

0 Comments