ಮಂಗಳೂರು (ಮೇ 19): ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಮುಂಬರುವ ಮೇ 30 ಶನಿವಾರದಂದು ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ಜರುಗಲಿರುವ "ಪಟ್ಲ ಸಂಭ್ರಮ 2026" ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ ಅತ್ಯಂತ ಭಕ್ತಿಪೂರ್ವಕವಾಗಿ ಸಮರ್ಪಿಸಲಾಯಿತು.
ಎಡನೀರು ಮಠದಲ್ಲಿ ಶ್ರೀಗಳನ್ನು ಭೇಟಿಯಾದ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ಪದಾಧಿಕಾರಿಗಳು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡೆದರು. ಆಮಂತ್ರಣವನ್ನು ಪ್ರೀತಿಯಿಂದ ಸ್ವೀಕರಿಸಿದ ಶ್ರೀಗಳು, ಯಕ್ಷಗಾನ ಕಲೆಯ ಉಳಿವಿಗಾಗಿ ಹಾಗೂ ಕಲಾವಿದರ ಕಲ್ಯಾಣಕ್ಕಾಗಿ ಟ್ರಸ್ಟ್ ನಡೆಸುತ್ತಿರುವ ನಿರಂತರ ಸೇವಾ ಕಾರ್ಯಗಳನ್ನು ಶ್ಲಾಘಿಸಿ, ಮುಂಬರುವ ಪಟ್ಲ ಸಂಭ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ಪ್ರಮುಖ ಪದಾಧಿಕಾರಿಗಳಾದ ಮಂಜುನಾಥ ಆಳ್ವ ಮಡ್ವ, ದಿವಾಣ ಶಿವಶಂಕರ ಭಟ್, ಪೃಥ್ವಿರಾಜ್ ಜೆ ಶೆಟ್ಟಿ, ಅವಿನಾಶ ಕಾರಂತ ಎಮ್. ಹಾಗೂ ಮಾನೀಶ ಪಾಟಾಳಿ ಎಡನೀರು ಉಪಸ್ಥಿತರಿದ್ದರು.

0 Comments