ಕುಂಬಳೆ : ಪ್ರಮುಖ ಕೈಗಾರಿಕೋದ್ಯಮಿ ಮತ್ತು ಬಿಜೆಪಿ ನಾಯಕ ವಿಕ್ರಮ್ ಪೈ ಅವರ ಕಾರಿನ ಚಕ್ರಕ್ಕೆ ಸಿಲುಕುವ ರೀತಿಯಲ್ಲಿ ಸ್ಫೋಟಕ ವಸ್ತು ಇರಿಸಿ ಸಿಡಿಸಿದ ಘಟನೆಯು ಅವರ ಜೀವಕ್ಕೆ ಅಪಾಯವನ್ನುಂಟುಮಾಡುವ ಪ್ರಯತ್ನ ಎಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ಸಂಶಯ ವ್ಯಕ್ತಪಡಿಸಿದೆ. ಈ ಬಗ್ಗೆ ಸ್ವತಃ ಪೋಲಿಸರೇ ಸ್ಫೋಟವು ಹಂದಿಗೆ ಇರಿಸುವ ಪಟಾಕಿ ಎಂದು ತೀರ್ಮಾನಿಸುವ ಮೂಲಕ ಘಟನೆಯನ್ನು ಲಘಕರಿಸಿದ್ದಾರೆಂದು ಬಿಜೆಪಿಯು ಆರೋಪಿಸಿದೆ.
ಕುಂಬಳೆ ಪೇಟೆಯ ಪಕ್ಕದಲ್ಲಿರುವ ಅವರ ತೋಟದ ಮನೆಗೆ ಹೋಗುವ ತೆರೆದ ಖಾಸಗಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹಂದಿಗಳು ಇಲ್ಲದ ಸ್ಥಳದಲ್ಲಿ ಪಟಾಕಿಗಳನ್ನು ಇಟ್ಟಿರುವುದರ ಉದ್ದೇಶವೇನೆಂದು ಪೊಲೀಸರು ಪ್ರಕರಣದಿಂದ ನುಣುಚಿಕೊಳ್ಳುತ್ತಿದ್ದಾರೆಂದು ಆರೋಪಿಸಲಾಗಿದೆ. ಸಾಮಾಜಿಕವಾಗಿ ಪಕ್ಷ ಇನ್ನಿತರ ಚಟುವಟಿಕೆಗಳಲ್ಲಿ ಜನಾನುರಾಗಿಯಾಗಿರುವ ವಿಕ್ರಮ್ ಪೈ ಅವರನ್ನು ಶತ್ರುಗಳು ಉದ್ದೇಶಪೂರ್ವಕ ಕೃತ್ಯ ಕ್ಕೆ ಪ್ರಯತ್ನಿಸಿದ್ದಾರೆಯೇ ಎಂಬುದು ಸಂಶಯಾಸ್ಪದವಾಗಿದೆ. ಈ ಪ್ರದೇಶದಲ್ಲಿ ಕೋಮು ಸೌಹರ್ದತೆಯ ವಾತಾವರಣವನ್ನು ನಾಶಮಾಡಲು ಈ ದುಷ್ಕ್ರತ್ಯಕ್ಕೆ ಪ್ರಯತ್ನಿಸಲಾಗಿದೆಯೇ ಎಂಬುದು ಅನುಮಾನವಾಗಿದೆ. ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸದಿದ್ದಲ್ಲಿ ಪೊಲೀಸ್ ಠಾಣೆ ಮುತ್ತಿಗೆ ಸೇರಿದಂತೆ ಉಗ್ರ ಪ್ರತಿಭಟನೆಗಿಳಿಯಲು ಸಜ್ಜಾಗುತ್ತಿರುವುದಾಗಿ ಬಿಜೆಪಿ ಕುಂಬಳೆ ಮಂಡಲ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

0 Comments