ಮಾಣಿಲ : ಸುಮಾರು 40 ವರ್ಷಗಳ ಕಾಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆಯ ತಾರಿದಳ ಅಂಗನವಾಡಿ ಕೇಂದ್ರದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನೂರಾರು ಪುಟಾಣಿಗಳ ಬಾಳ ದೀವಿಗೆಯ ಬೆಳಗಿ ಸೇವಾ ನಿವೃತ್ತಿ ಹೊಂದುತ್ತಿರುವ ರೇವತಿ ಟೀಚರ್ ಕುಕ್ಕಾಜೆ ಇವರಿಗೆ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ತಾರಿದಳ ಅಂಗನವಾಡಿ ಕೇಂದ್ರದಲ್ಲಿ ಜರಗಿತು. ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ದಿವ್ಯಶ್ರೀ ಪಿ.ಕೆ ಕುಕ್ಕಾಜೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ದೀಪ ಪ್ರಜ್ಜಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅನುಗ್ರಹ ನುಡಿಯಾಡುತ್ತಾ 'ಗುರುವನ್ನು ಮೀರುವ ಶಕ್ತಿ ಇನ್ನೊಂದಿಲ್ಲ ಎಲ್ಲದಕ್ಕೂ ಮೊದಲು ಗುರು, ಗುರು ಶಕ್ತಿ ಒಲಿದರೆ ಸಮಾಜದಲ್ಲಿ ಭಯವಿಲ್ಲದೆ ಬದುಕಲು ಸಾಧ್ಯ' ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭೆಯಲ್ಲಿ ಪೆರುವಾಯಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೃಷ್ಣಮೂರ್ತಿ ಭಟ್, ಮಾಣಿಲ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಅಳಿಕೆ ವಲಯ ಮೇಲ್ವಿಚಾರಕಿ ಲೋಲಾಕ್ಷಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದಾ ಮೊದಲಾದವರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಬೇರೆ, ಬೇರೆ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ರೇವತಿ ಟೀಚರ್ ಕುಕ್ಕಾಜೆ ವೃತ್ತಿ ಜೀವನದಲ್ಲಿ ನಡೆದ ಸುಖ ದುಃಖವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾಣಿಲ ಗ್ರಾಮದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಮಕ್ಕಳ ನೃತ್ಯ ವೈವಿದ್ಯ, ಹಾಗೂ ಗಾಯತ್ರಿ ಮ್ಯೂಸಿಕ್ ಪುತ್ತೂರು ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ತಾರಿದಳ ಅಂಗನವಾಡಿ ಟೀಚರ್ ಜಯಕುಮಾರಿ ಸ್ವಾಗತಿಸಿ, ಮಾಣಿಲ ಗ್ರಾ.ಪಂ.ನಿಕಟ ಪೂರ್ವ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು ವಂದಿಸಿದರು, ರವಿ ಎಸ್ಎಂ ಕುಕ್ಕಾಜೆ ನಿರೂಪಿಸಿದರು.

0 Comments