Ticker

6/recent/ticker-posts

Ad Code

ಸಿರಿಬಾಗಿಲಿನಲ್ಲಿ ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರ ಶೃಂಗೇರಿ ಶ್ರೀಗಳಿಂದ ಲೋಕಾರ್ಪಣೆ

 


ಕಾಸರಗೋಡು : "ಭಾರತೀಯ ಪರಂಪರೆಯಲ್ಲಿ ಕಲೆಗಳು ಕೇವಲ ಮನೋರಂಜನೆಯ ಕಲೆಗಳಾಗಿರದೆ ಸಮಾಜಕ್ಕೆ ಸಂಸ್ಕಾರವನ್ನು ಬೋಧಿಸುವ ಮಾಧ್ಯಮವಾಗಿದೆ. ಅದರಲ್ಲೂ ಯಕ್ಷಗಾನಕಲೆಯು, ವೇದ- ಪುರಾಣ ಕಥೆಗಳನ್ನು ಆಧರಿಸಿ ಅದರ ಪ್ರಧಾನ ಸಂದೇಶವನ್ನು ಸಮಾಜಕ್ಕೆ ಸಾರುತಿದೆ. ಪ್ರಧಾನವಾಗಿ ಮಾನವರಲ್ಲಿ ಬೇಕಾಗಿರುವುದು ಸಂಸ್ಕಾರ.  ಸಂಸ್ಕಾರ ಹೊಂದಿದ ಮಾನವರು ನಿರ್ಭೀತಿಯಿಂದ ಜೀವನವನ್ನು ನಡೆಸಬಹುದು. ಯಕ್ಷಗಾನಕ್ಕೆ ಪಾರಂಪರಿಕ ಹಿನ್ನೆಲೆ ಇದೆ. ಹಿರಿಯರು ನಡೆದು ಬಂದ ರೀತಿ, ಅವರ ಆದರ್ಶಗಳು  ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಅವರು ನೀಡಿದ ಕೊಡುಗೆ, ಅದನ್ನು ನೆನಪಿಸುತ್ತ ಇಂದಿನ ಜನಾಂಗ, ಅದೇ ತಳಹದಿಯ ಸಂಸ್ಕಾರವನ್ನು ಪೋಣಿಸಿ ಮುನ್ನಡೆಸಬೇಕು.ಈ ನಿಟ್ಟಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಅಧ್ಯಕ್ಷರಾದ ಭಾಗವತ  ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರ ನೇತೃತ್ವದಲ್ಲಿ  ಯಕ್ಷಗಾನ ನಡೆದು ಬಂದ ರೀತಿ, ವೇಷಭೂಷಣಗಳ ವೈಶಿಷ್ಟ್ಯ,  ಕೀರ್ತಿಶೇಷ ಕಲಾವಿದರುಗಳ ಕೊಡುಗೆ ಮುಂತಾದವುಗಳನ್ನು, ಗುರುತಿಸಿ ದಾಖಲಿಸಿ ಅಧ್ಯಯನಕ್ಕೆ ಸೀಮಿತಗೊಳಿಸಿದೆ. ಈ ರೀತಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನ ಪ್ರಯತ್ನಕ್ಕೆ ಶ್ರೀಮಠದ ಆಶೀರ್ವಾದ ಸಹಕಾರ ನಿರಂತರ ನಿಮಗಿದೆ" ಎಂದು ಆಶೀರ್ವದಿಸಿದರು.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಎನ್. ಎಂ.ಪಿ.ಎ. ಮಂಗಳೂರು(ಫೋರ್ಟ್ ಅಥಾರಿಟಿ ಸಂಸ್ಥೆಯು) ನೀಡಿದ 15 ಲಕ್ಷ ರೂಪಾಯಿಗಳ ಸಿ .ಎಸ್.ಆರ್.ಫಂಡ್ ಮೂಲಕ 'ಯಕ್ಷಗಾನ ಪರ್ಫಾರ್ಮೆನ್ಸ್ ಹಾಲ್' ನಿರ್ಮಿಸಿದೆ. ಅದರಂತೆ ನೂತನವಾಗಿ ನಿರ್ಮಾಣಗೊಂಡ ಸಭಾಮಂದಿರಕ್ಕೆ ಬ್ರಹ್ಮೈಕ್ಯ 'ಶ್ರೀ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರ' ಎಂಬ ಹೆಸರಿರಿಸಿ ಈ ಮಂದಿರವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ  ವಿಧುಶೇಖರಾನಂದ ಭಾರತೀ ಮಹಾಸ್ವಾಮಿಗಳವರು, ಶ್ರೀ ಶೃಂಗೇರಿ ಶಾರದಾ ಪೀಠ ಇವರು ಲೋಕಾರ್ಪಣೆಗೈದು ಆಶೀರ್ವಚನ ಮೂಲಕ ಅನುಗ್ರಹಿಸಿದರು. 

ಬ್ರಹ್ಮಶ್ರೀ ಇರುವೈಲು ಕೃಷ್ಣ ದಾಸ ತಂತ್ರಿ,  ಯೋಗೀಶ ಅಡಿಗ ಮತ್ತು ಬಳಗದವರು ಕುಂಬಳೆ   ವಿನಯರಾಜ ಶೆಟ್ಟಿ ಉದ್ಯೋಗಿಗಳು ಎನ್ ಎಂ ಪಿ ಏ ಮಂಗಳೂರು, ಮದ್ದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಸುಜ್ಞಾನಿ ಶಾನುಭಾಗ್, ಪ್ರೊಫೆಸರ್ ಶ್ರೀನಾಥ ಕಾಸರಗೋಡು,  ಶೀನ ಶೆಟ್ಟಿ ಕಜೆ,  ಜಯಾನಂದ ಕುಮಾರ್ ಹೊಸದುರ್ಗ, ರವೀಂದ್ರ ರೈ ಸಿರಿಬಾಗಿಲು, ಶ್ಯಾಮ್ ಕುಂಚಿನಡ್ಕ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರು, ವಿವಿಧ ಭಜನಾ ಸಂಘಗಳ ಪದಾಧಿಕಾರಿಗಳು, ದಿ. ಸಿರಿಬಾಗಿಲು ವೆಂಕಪ್ಪಯ್ಯನವರ ಮನೆಯ ಸದಸ್ಯರು, ಊರ-ಪರವೂರ ಹಲವಾರು ಗಣ್ಯರು ಭಾಗವಹಿಸಿ ಮಂತ್ರಾಕ್ಷತೆ ಸ್ವೀಕರಿಸಿದರು.   ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅತಿಥಿಗಳನ್ನು ಸ್ವಾಗತಿಸಿ, ರಾಜ ರಾಮರಾವ್ ಮೀಯಪದವು ಧನ್ಯವಾದವಿತ್ತರು. ದಾಮೋದರ್ ಶರ್ಮ ಬಾರ್ಕೂರು ನಿರೂಪಿಸಿದರು. ಗಡಿನಾಡು ಕಾಸರಗೋಡಿನ ಸಿರಿಬಾಗಿಲಿಗೆ ಜಗದ್ಗುರುಗಳ ಪಾದಸ್ಪರ್ಶದಿಂದ ಸಿರಿಬಾಗಿಲು ಹಾಗೂ ಸಿರಿಬಾಗಿಲು ಪ್ರತಿಷ್ಠಾನವು ಪವಿತ್ರವಾಯಿತು ಎಂದು ಪ್ರತಿಷ್ಠಾನವು ಸಂತಸವನ್ನು ವ್ಯಕ್ತಪಡಿಸಿತು.

Post a Comment

0 Comments