ಮಾರ್ಪನಡ್ಕ : ಸನಾತನ ಹಿಂದು ಧರ್ಮಿಯರು ಸಮಗ್ರವಾಗಿ ಒಗ್ಗೂಡುವ ಜತೆಗೆ ನಮ್ಮೊಳಗಿರುವ ಅಸ್ಪ್ರಶ್ಯತಾ ಭಾವ ದೂರೀಕರಿಸಲು ಪ್ರಯತ್ನಿಸಬೇಕು. ಕುಂಬ್ಡಾಜೆಯ ಈ ಹಿಂದೂ ಸಮಾಜೋತ್ಸವದಿಂದ ಅಸ್ಪ್ರಶ್ಯತೆ ಅಧಃಪತನಗೊಳ್ಳುವಂತಾಗಲಿ ಎಂದು ವಿಶ್ವ ಹಿಂದೂ ಪರಿಷತ್, ದಕ್ಷಿಣ ಕರ್ನಾಟಕ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.ಅವರು ಕುಂಬ್ಡಾಜೆ ಪಂಚಾಯತ್ ಹಿಂದೂ ಸಮಾಜೋತ್ಸವ ಸಮಿತಿ ಜಯನಗರ ಮೈದಾನದಲ್ಲಿ ಆಯೋಜಿಸಿದ ಹಿಂದೂ ಸಮಾಜೋತ್ಸವವನ್ನು ಉದ್ದೇಶಿಸಿ ದಿಕ್ಕೂಚಿ ಭಾಷಣಗೈದರು.
ವೇದಮೂರ್ತಿ ಬ್ರಹ್ಮಶ್ರೀ ಗಣೇಶ್ ತಂತ್ರಿ ದೇಲಂಪಾಡಿ ಸಮಾಜೋತ್ಸವವನ್ನು ಉದ್ಘಾಟಿಸಿ ಅನುಗ್ರಹ ಭಾಷಣಗೈಯುತ್ತಾ ಹಿಂದು ಧರ್ಮದ ಆಚಾರ ಸಂಸ್ಕಾರಗಳಿಂದ ಯುವ ಪೀಳಿಗೆ ದೂರವುಳಿಯುತ್ತಿರುವ ಸಂದರ್ಭದಲ್ಲಿ ಸಮಾಜದ ಸದಾ ಕಣ್ಗಾವಲಾಗಿರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಸಂಭ್ರಮದ ಪರ್ವ ಕಾಲದಲ್ಲಿ ಏರ್ಪಡಿಸಿದ ಈ ಕಾರ್ಯಕ್ರಮ ಜನತೆಯನ್ನು ಜಾಗೃತಗೊಳಿಸುವಂತಾಗಿದೆ.ಯುವಶಕ್ತಿ ಮತ್ತು ಮಾತೃಶಕ್ತಿ ರಾಷ್ಟ್ರೋತ್ತಾನದ ಮೈಲುಗಲ್ಲು. ನಮ್ಮ ಆಧ್ಯಾತ್ಮಿಕ ಸಂಸ್ಕಾರ, ಧರ್ಮವನ್ನು ಎತ್ತಿಹಿಡಿಯಬೇಕು ಎಂದರು. ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಸಂತೋಷಕುಮಾರ್ ಗಾಡಿಗುಡ್ಡೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಹಿಂದುತ್ವದ ಧರ್ಮಸಾರವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಪ್ರತಿ ಪಂಚಾಯತುಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಧರ್ಮಜಾಗೃತ ಕಾರ್ಯಕ್ರಮಗಳು ಜನಮುಖಿಯಾಗಿ ಆಯೋಜನೆಗೊಳ್ಳಬೇಕು ಎಂದರು. ವಿಶ್ವಹಿಂದೂ ಪರಿಷತ್ ಅಂತರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭಜರಂಗ್ ಲಾಲ್ ಬಾಗಡೆಜಿ ಹಾಗೂ ಬಜರಂಗದಳ ಕ್ಷೇತ್ರೀಯ ಸಂಯೋಜಕ ಜಿಜೇಶ್ ಪಟೇರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಹಿಂದೂ ಸಮಾಜೋತ್ಸವ ಸಮಿತಿ ರಕ್ಷಾಧಿಕಾರಿ ಹರಿನಾರಾಯಣ ಶಿರಂತಡ್ಕ,ಗೌರವಾಧ್ಯಕ್ಷ ರಾಮಚಂದ್ರ ಮಾರ್ಪನಡ್ಕ, ಮಹಿಳಾ ಸಮಿತಿ ಅಧ್ಯಕ್ಷೆ ಲಾವಣ್ಯಗಿರೀಶ್ ಉಪಸ್ಥಿತರಿದ್ದರು. ವಿದ್ಯಾಲಕ್ಷ್ಮಿ ಮೈಲ್ಲೊಟ್ಟಿ ಪ್ರಾರ್ಥನೆ ಹಾಡಿದರು. ಸಮಿತಿ ಸಂಚಾಲಕ ಹರಿಪ್ರಸಾದ್ ಪುತ್ರಕಳ ಸ್ವಾಗತಿಸಿ ಮಹಿಳಾ ಸಮಿತಿ ಪ್ರಧಾನ ಕಾರ್ಯದರ್ಶಿ, ರೋಶಿಣಿ ಜನಾರ್ದನ ವಂದಿಸಿದರು. ರಮೇಶ್ ಕೃಷ್ಣ ಪದ್ಮಾರ್ ನಿರೂಪಿಸಿದರು. ಸಮಾಜೋತ್ಸವದ ಅಂಗವಾಗಿ ಕುಣಿತ ಭಜನೆ, ತಿರುವಾದಿರ ಪ್ರದರ್ಶನ ಜನ ಮನ ರಂಜಿಸಿತು.


0 Comments