ಬದಿಯಡ್ಕ : ಪಿಲಾಂಕಟ್ಟೆ ಸಮೀಪದ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರದಲ್ಲಿ ಮೇ 11 ಸೋಮವಾರ ಬಡಗು ಶಬರಿ ಮಲೆ ಕ್ಷೇತ್ರದ ಪವಿತ್ರ 18 ಮೆಟ್ಟಿಲುಗಳಿಗೆ ತಾಮ್ರ ಹೊದಿಕೆ ಹಾಸಿದ ಸಮರ್ಪಣೋತ್ಸವ ಜರಗಲಿದೆ. ಮೇ 11ಕ್ಕೆ ಸಂಜೆ 5 ಗಂಟೆಯಿಂದ ಶ್ರೀ ಎಡನೀರು ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ತಾಮ್ರ ಹೊದಿಕೆ ಹಾಸಿದ ಮೆಟ್ಟಿಲುಗಳ ಸಮರ್ಪಣೋತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ, ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ್ ತಂತ್ರಿ, ಶಬರಿಮಲೆಯ ಪಂದಳಂ ಕೊಟ್ಟಾರದ ಶ್ರೀ ನಾರಾಯಣ ವರ್ಮ, ಕ್ಷೇತ್ರ ಜ್ಯೋತಿಷಿ ಶ್ರೀ ನಾಗಂದ್ರ ಭಾರದ್ವಾಜ್, ಕಂಚಿನ ತಟ್ಟೆ ಹೊದಿಕೆಯ ಪ್ರಧಾನ ದಾನಿ ತಾಳಿಪ್ಪಾಡಿ ಜಾಹ್ನವಿ ಶಾಸ್ತ್ರಿ ಹಾಗೂ ಇತರ ಗಣ್ಯರು ಭಾಗವಹಿಸುವರು.
ಸಂಜೆ 6.30ಕ್ಕೆ 18 ಮೆಟ್ಟಿಲುಗಳ ದ್ವಾರ ಪೂಜೆ ನಡೆಯಲಿದೆ. ರಾತ್ರಿ 8 ಗಂಟೆಗೆ ಕ್ಷೇತ್ರ ಉತ್ಸವ ಜರಗಲಿದ್ದು, 101 ಚೆಂಡೆ ವಾದ್ಯಮೇಳ ಹಾಗೂ ಆನೆ ಅಂಬಾರಿಯೊಂದಿಗೆ ಕೇರಳ ಶೈಲಿಯ ಪೂರೋತ್ಸವವನ್ನು ಸ್ಮರಿಸುವ ರೀತಿಯ ಉತ್ಸವ ಈ ಬಾರಿ ವಿಶೇಷತೆಯಾಗಿದೆ ಎಂದು ಕ್ಷೇತ್ರ ಸಮಿತಿ ತಿಳಿಸಿದೆ.


0 Comments