ಮಂಗಳೂರು : ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಉದ್ಯಮ ನಡೆಸುತ್ತಿದ್ದ ಯುವಕನೊಬ್ಬ ಸಂಪಾಜೆ ಸಮೀಪದ ಗೂನಡ್ಕದ ಲಾಡ್ಜ್ ಒಂದರ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ವ್ಯಕ್ತಿಯನ್ನು ಪಾಣೆಮಂಗಳೂರು ಹೊರವಲಯದ ಬೊಂಡಾಲ ಶಾಂತಿಗುಡ್ಡೆ ನಿವಾಸಿ, ನಾರಾಯಣ ಕುಲಾಲ್ ಅವರ ಪುತ್ರ ತಿಲಕರಾಜ್ (28) ಎಂದು ಗುರುತಿಸಲಾಗಿದೆ. ಇವರು ಮಾರ್ಚ್ 19ರಂದು ಅನಂತಾಡಿಯಲ್ಲಿ ಮನೆಯೊಂದರ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸಕ್ಕೆ ಬೇಕಾದ ಮೆಟೀರಿಯಲ್ ಹಾಕಿ ಬಂದಿದ್ದರು. ಮಾರ್ಚ್ 20ರ ಸಂಜೆಯಿಂದ ಮನೆಯವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ತಿಲಕರಾಜ್ ಅವರು ಕಲ್ಲಡ್ಕದಿಂದ ಮಡಿಕೇರಿ ರಸ್ತೆಯ ಮೂಲಕ ತನ್ನ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಮಾರ್ಚ್ 20ರ ಸಂಜೆ ವೇಳೆಗೆ ಸಂಪಾಜೆ ಸಮೀಪದ ಗೂನಡ್ಕದಲ್ಲಿ ರೂಮ್ ಮಾಡಿಕೊಂಡಿದ್ದರು. ಮಾರ್ಚ್ 21ರ ಬೆಳಗ್ಗೆ ರೂಮ್ನ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಕಿಟಕಿ ಮೂಲಕ ಒಳ ಪ್ರವೇಶಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಪ್ರಕರಣ ದಾಖಲಿಸಲಾಗಿದೆ.

0 Comments