ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಪೆರಡಾಲ ಕ್ಷೇತ್ರಕ್ಕೆ ಕೊಡುಗೈದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಭೇಟಿ
ಬದಿಯಡ್ಕ: ಜೀರ್ಣೋದ್ಧಾರಗೊಳ್ಳುತ್ತಾ ಬ್ರಹ್ಮಕಲಶೋತ್ಸವದ ಸನಿಹದಲ್ಲಿರುವ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಸ್ಥಾನಗಳ ನಂತರ ಬರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಕೊಡುಗೈ ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಭೇಟಿ ನೀಡಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದರು. ಪೆರಡಾಲ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಜೀರ್ಣೋದ್ಧಾರ ಕಾರ್ಯದ ವಿವರವನ್ನು ನೀಡಿದರು.
ಕುಟ್ಟಿಚ್ಚಾತನ ಮಹಿಮೆ :
ಯಾವುದೇ ವಸ್ತು ಕಾಣೆಯಾದರೆ, ತಮ್ಮ ಕಾರ್ಯ ಕೈಗೂಡಬೇಕಾದರೆ ನಾಡಿನ ಭಗವದ್ಭಕ್ತರಿಗೆ ಬೇಗನೆ ನೆನಪಾಗುವುದು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಆರಾಧಿಸಲ್ಪಡುವ ಕುಟ್ಟಿಚ್ಚಾತನನ್ನು. ಪ್ರಧಾನ ಅರ್ಚಕ ಶಿವರಾಮ ಭಟ್ ಪೆರಡಾಲ ಕುಟ್ಟಿಚ್ಚಾತನ ಮಹಿಮೆಯನ್ನು ತಿಳಿಸಿ ಶ್ರೀದೇವರಲ್ಲಿ ಪ್ರಾರ್ಥಿಸಿ ಪ್ರಸಾದವನ್ನು ನೀಡಿದರು. ನಂತರ ನಡೆದ ಸರಳ ಸಮಾರಂಭದಲ್ಲಿ ಸದಾಶಿವ ಶೆಟ್ಟಿಯವರನ್ನು ಶಾಲು ಹೊದೆಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿ ಪೆರಡಾಲ ಕುಂಬಳೆ ಸೀಮೆಯ ಅನೇಕ ದೇವಸ್ಥಾನಗಳು ಅಭಿವೃದ್ಧಿಯನ್ನು ಕಂಡಿದೆ. ಪುರಾತನವಾದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನವು ಇದಕ್ಕೆ ಹೊರತಲ್ಲ. ಪ್ರಕೃತಿ ರಮಣೀಯವಾದ ಈ ಪ್ರದೇಶದಲ್ಲಿ ದೇವರ ಸಾನ್ನಿಧ್ಯವು ಭಗವದ್ಭಕ್ತರನ್ನು ಸೆಳೆಯುತ್ತದೆ. ಜೀರ್ಣೋದ್ಧಾರದ ಮುಂದಿನ ಹಂತದ ಕೆಲಸಕಾರ್ಯಗಳಿಗೆ ಆರ್ಥಿಕ ನೆರವನ್ನು ನೀಡುವುದಾಗಿ ಅವರು ತಿಳಿಸಿದರು. ಮೊದಲ ಹಂತದ ಕೆಲಸಗಳಿಗೆ ಈಗಾಗಲೇ ಅವರು ಆರ್ಥಿಕ ಸಹಾಯವನ್ನು ನೀಡಿದ್ದರು. ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಸಮಿತಿ ಸದಸ್ಯ ಸೀತಾರಾಮ ನವಕಾನ, ಮಾಜಿ ಆಡಳಿತ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲ ಗುತ್ತು, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಲೆಕ್ಕಪರಿಶೋಧಕ ಸತೀಶ ಪುದ್ಯೋಡು, ಯುವ ಸಮಿತಿಯ ಅಧ್ಯಕ್ಷ ಶ್ರೀಶಕುಮಾರ ಪಂಜಿತ್ತಡ್ಕ, ಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ಜೊತೆಕಾರ್ಯದರ್ಶಿ ಗಣೇಶ್ ಪ್ರಸಾದ ಕಡಪ್ಪು, ಕಾರ್ತಿಕ್ ಶೆಟ್ಟಿ ಮಜಿಬೈಲು, ಸಿಬ್ಬಂದಿವರ್ಗ, ಶಿವಶಕ್ತಿ ಪೆರಡಾಲದ ಸದಸ್ಯರು, ಭಗವದ್ಭಕ್ತರು ಪಾಲ್ಗೊಂಡಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆಡಳಿತ ಸಮಿತಿ ಸದಸ್ಯ ಜಗನ್ನಾಥ ರೈ ಪೆರಡಾಲಗುತ್ತು ವಂದಿಸಿದರು.
0 Comments