ಕುಂಬಳೆ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಅ.27 ರಿಂದ 30ರ ವರೆಗೆ ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವೈವಿಧ್ಯಮಯವಾಗಿ ನಡೆಯಲಿದೆ ಎಂದು ಸಂಘಟನಾ ಸಮಿತಿ ಪದಾಧಿಕಾರಿಗಳು ಬುಧವಾರ ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.27ರಂದು ವೇದಿಕೆಯೇತರ ಸ್ಪರ್ಧೆಗಳೊಂದಿಗೆ ಕಲೋತ್ಸವ ಆರಂಭಗೊಳ್ಳಲಿದೆ. 28 ರಂದು ಬೆಳಿಗ್ಗೆ 9.30ಕ್ಕೆ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ಪೈವಳಿಕೆ ಗ್ರಾ.ಪಂ.ಅಧ್ಯಕ್ಷೆ ಜಯಂತಿ ಕೆ.ಅಧ್ಯಕ್ಷತೆ ವಹಿಸುವರು. ಜಿ.ಪಂ.ಉಪಾಧ್ಯಕ್ಷ ಶಾನವಾಸ್ ಪಾದೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತಾ ಪ್ರಾಸ್ತಾವಿಕವಾಗಿ ಮಾತನಾಡುವರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು.
ಅ.30 ರಂದು ಸಂಜೆ 4 ರಿಂದ ನಡೆಯುವ ಸಮಾರೋಪ ಸಮಾರಂಭವನ್ನು ಜಿ.ಪಂ.ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ಮಂಜೇಶ್ವರ ಬ್ಲಾ.ಪಂ.ಅಧ್ಯಕ್ಷೆ ಶಮೀಮ ಟೀಚರ್ ಅಧ್ಯಕ್ಷತೆ ವಹಿಸುವರು. ರಾಜ್ಯ ವಿದ್ಯಾಭ್ಯಾಸ ಇಲಾಖೆಯ ಯೋಜನಾಧಿಕಾರಿ ಇಬ್ರಾಹಿಂ ಬಿ.ಮುಖ್ಯ ಅತಿಥಿಗಳಾಗಿರುವರು. ಮಂಜೇಶ್ವರ ಠಾಣಾಧಿಕಾರಿ ಅನೂಪ್ ಕುಮಾರ್ ಇ. ಬಹುಮಾನಗಳನ್ನು ವಿತರಿಸುವರು. ವಿವಿಧ ವಲಯಗಳ ಗಣ್ಯರು ಶುಭಹಾರೈಸುವರು.
ಉಪಜಿಲ್ಲೆಯ 48 ಕಿರಿಯ ಪ್ರಾಥಮಿಕ, 17 ಹಿರಿಯ ಪ್ರಾಥಮಿಕ, ಹೈಸ್ಕೂಲ್ ವಿಭಾಗದ 17 ಹಾಗೂ ಹೈರ್ ಸೆಕೆಂಡರಿ ವಿಭಾಗದ 18 ಮತ್ತು ಇತರ ಅನುದಾನ ರಹಿತ ಶಾಲೆಗಳ ಸುಮಾರು 4500ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪ್ರತಿಭಾ ಪ್ರದರ್ಶನದ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿರುವರು. ಒಟ್ಟು 27 ವೇದಿಕೆಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, 7 ಮುಖ್ಯ ವೇದಿಕೆಗಳಳಲ್ಲಿ ಸ್ಪರ್ಧೆಗಳು ರಂಗೇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ.
ಕಲೋತ್ಸವದ ಪ್ರಧಾನ ಸಂಚಾಲಕ, ಪ್ರಭಾರ ಪ್ರಾಂಶುಪಾಲ ವಿಶ್ವನಾಥ ಕೆ., ಮುಖ್ಯ ಶಿಕ್ಷಕಿ ಕುಮಾರಿ ವತ್ಸಲಾ ಜಿ.ಎಸ್., ಎಸ್ಎಂಸಿ ಅಧ್ಯಕ್ಷ ಅಜೀಜ್ ಕಳಾಯಿ ಮತ್ತು ಪ್ರಚಾರ ಸಮಿತಿ ಸಂಚಾಲಕ ಪ್ರವೀಣ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

0 Comments